Tuesday, 3 September 2013

ನನಗೆ ಬರೀ ೮೦೦ ಜನ ಫ್ರೆದ್ಸ್ ಇದ್ದರೇ, ಅವಳಿಗೋ ೩,೮೦೦ ಜನ ಫ್ರೆಂಡ್ಸ್. ನನಗೂ ಆಕೆಗೂ ೩೦೭ ಜನ ಮ್ಯೂಚುವಲ್ ಫ್ರೆಂಡ್ಸ್. ಆಕೆಯ ಪ್ರಬುದ್ದ ಬರಹಗಳ ಅಭಿಮಾನಿ ನಾನು. ಬೇರೆಯವರ ಪೋಸ್ಟ್ ಗೆ ನಾ ಹಾಕಿದ ಕಾಮೆಂಟ್ ನ ಅವಳು ಲೈಕ್ ಮಾಡ್ತಾಳೆ. ಆದರೂ ನಾವಿಬ್ರೂ ಫ್ರೆಂಡ್ಸ್ ಅಲ್ಲ  ಹೀಗೊಂದು ಸುಂದರ ಸಂಬಂಧ (!) 
ಇವತ್ತು ಆಧಾರ ಕಾರ್ಡ್ ಮಾಡಿಸೋಕೆ ೨ ಗಂಟೆಗಳ ಕಾಲ ಕ್ಯೂ ನಲ್ಲಿ ಇರಬೇಕಾಯ್ತು. ಪಕ್ಕದಲ್ಲಿ ಎರಡು ಸಣ್ಣ ಮಕ್ಕಳ ತಾಯಿ. ನಮ್ಮ ಸರದಿ ಬರೋ ತನಕ ಹರಟಿದೆವು. ಭಾಗ್ಯ ಲಕ್ಷ್ಮೀ ಯೋಜನೆ ಬಗ್ಗೆ, ಆಧಾರ ಕಾರ್ಡ್ ಯಾಕೆ ಮಾಡೋದು ಅಂತಾ, ಹೆಣ್ಣು ಮಕ್ಕಳು ಮತ್ತು ಗಂಡು ಮಕ್ಕಳ ಸ್ವಭಾವ, ವರ್ತನೆ ಹೇಗೆ ಇರುತ್ತೆ ಅಂತಾ. ಅಷ್ಟು ಅಲ್ಪ ಸಮಯದಲ್ಲೇ ನನ್ನ 'ಅಕ್ಕ ' ಎಂದು ಕರೆದು ಹತ್ತಿರ ಅನಿಸಿದಳು. ಅವಳ್ಯಾರೋ! ನಾನ್ಯಾರೋ! ವಯ್ಯುಕ್ತಿಕ ಪ್ರಶ್ನೆಗಳೇ ಇರಲಿಲ್ಲ. ನಮ್ಮಿಬ್ಬರ ಮಕ್ಕಳು ಆಟ ಆಡ್ತಾ ಇದ್ವು. ಸಮಯ ಮುಗೀತಿತ್ತು, ನನಗೆ ಕೊನೇ, ಇನ್ಯಾರಿಗೂ ಕಾರ್ಡ್ ಮಾಡೋಲ್ಲ ಅಂದ್ರು. ನನ್ನ ನೆಕ್ಸ್ಟ್ ಅವಳು, ಪಾಪ ಎರಡು ಮಕ್ಕಳ ತಾಯಿ. ಅವಳ ಕೈ ಅದ್ಮಿದೆ, ಇರೂ ಎಂದೆ. ನನ್ನ ಕಾರ್ಡ್ ಮಾಹಿತಿ ಆಗುವವರೆಗೂ ಕಂಪ್ಯೂಟರ್ ಮುಂದೆ ಕುಳಿತ ಸಿಬ್ಬಂದಿಯನ್ನು ರೇಗಿಸ್ತಾ , ನಗಿಸ್ತಾ ನಾನು ನನ್ನವ ಫ್ರೆಂಡ್ ಮಾಡ್ಕೊಂಡಾಗಿತ್ತು. ನಯವಾಗಿ, ಈಕೆಗೆ ಮಾಡಿಕೊಡಿ ಪ್ಲೀಸ್ ಎಂದು ನಾ ರಿಕ್ವೆಸ್ಟ್ ಮಾಡಿದೆ. ಕೆಲಸ ಸುಗಮ  ಇನ್ನೆಂದೂ ಸಿಗದ ಅವಳಿಗೆ ನಮ್ಮಿಬ್ಬರಲ್ಲಿ ಅದೇನೋ ಅಟ್ಯಾಚ್ಮೆಂಟ್ ಬೆಳೆದುಬಿಟ್ಟಿತ್ತು. ಬೈ ರೂಪಾ ಎಂದು ನಕ್ಕು ಬಂದೆ. ಅವಳ ಕಂಗಳಲ್ಲಿ ಕೃತಜ್ಞತೆ ಇತ್ತು.
ಸಂಬಂಧಗಳೇ ಹೀಗೆ ....... ಎಲ್ಲೋ ಇರುವ ನಾವು ಎಲ್ಲೋ ಸಿಗ್ತೇವೆ. ಒಂದಷ್ಟು ಸಮಯ ಜೊತೆ ಇರ್ತೇವೆ. ಅವರ ದಾರಿ ಅವರದು, ನಮಗೆ ನಮ್ಮದು. ಇದ್ದಷ್ಟು ಹೊತ್ತು ಚೆನ್ನಾಗಿದ್ರೆ ಸಾಕು 
ಬಯಸಿದ್ದು ಬಯಸಿದಾಗಲೇ ದೊರೆತರೆ ಬದುಕು ಚೆಂದ ಅಲ್ವಾ ? 
ಹಲ್ಲಿದ್ದಾಗ ಕಡ್ಲೆ ಇಲ್ಲ, ಕಡ್ಲೆ ಇದ್ದಾಗ ಹಲ್ಲು ಇಲ್ಲ ಅಂತಾದ್ರೆ ?

ಆದರೇ .............................
೧. ನನಗಾಗ ಬೆಳಗ್ಗೆ ೭.೩೦ ರಿಂದಾ ಕ್ಲಾಸು. ಬಸ್ ಹಿಡಿದು ಕಾಲೇಜ್ ಗೆ ಹೋಗಲು ಅರ್ಧ ಗಂಟೆಯ ಪಯಣ. ನಮ್ಮನೆ ಬಸ್ ನಿಲ್ದಾಣದಿಂದಾ ಒಂದೂವರೆ ಕಿ.ಮೀ ದೂರ. ಬೆಳಗ್ಗೆ ನಸುಗತ್ತಲು, ನೀರವ , ಚಳಿ, ಭಾರದ ಬ್ಯಾಗ್ ನೇತು ಹಾಕಿಕೊಂಡು ಒಬ್ಬಳೇ ಬಸ್ ನಿಲ್ದಾಣಕ್ಕೆ ಓಡಿ ಬರುತ್ತಿದ್ದೆ. ಎಷ್ಟೋ ಸಲ ಬಸ್ ಮಿಸ್ ಆಗ್ತಿತ್ತು. ಸಂಜೆ ವಾಪಸ್ ಬಸ್ ಇಳಿದು ಮನೆಯತ್ತ ಬರುವಾಗ ಆಯಾಸ , ಆಗ ಅನಿಸ್ತಿತ್ತು- ನಮ್ಮನೆ ಬಸ್ ನಿಲ್ದಾಣದ ಎದುರೇ ಇರಬಾರದಿತ್ತಾ?
ಆಸೆ ನೆರವೇರಿತು, ನಾನು ಕಾಲೇಜ್ ಮುಗಿಸಿ ಮದುವೆಯೂ ಮುಗಿದ ನಂತರ. ಅಮ್ಮನ ಮನೆ ಬಸ್ ನಿಲ್ದಾಣದ ಎದುರೇ ಇದೆ, ನಾನು ಮಾತ್ರಾ ಬಸ್ ನಲ್ಲಿ ಅಮ್ಮನ ಮನೆಗೇನು ಹೋಗೋದಿಲ್ಲ:-)
೨.ನನ್ನ ಇಪ್ಪತ್ತರಲ್ಲಿ, ಮೊದ ಮೊದಲಿಗೆ ಮನ ಸೆಳೆದ ಚೆಲುವ ನನಗೊಂದು ದಿನ I Love You Sujathaa ಎಂದ, ಸುಮಾರು ೨೦ ವರುಷಗಳ ಬಳಿಕ. ಏನ್ಮಾಡಲೀ ನಾನಾಗ ಎರಡು ಮುದ್ದು ಮಕ್ಕಳ ಅಮ್ಮ:-)
೩.ಮಗಳು ಜನಿಸಿ ಮೂರು ವರುಷಗಳ ನಂತರ, ಮಗಳಿಗೆ ಜೊತೆ ಬೇಕು ಎನಿಸ್ತು. ಆದರೇ ವೈದ್ಯರು ನಿಮಗೆ ಮಕ್ಕಳಾಗುವ ಸಾಧ್ಯತೆ ಇಲ್ಲ ಎಂದರು. ಆಸೆ ಅದುಮಿರಿಸಿ ಸುಮ್ಮನಾದೆ. ಆದರೇ ನನ್ನ ಫ್ರೆಂಡ್ ಒಬ್ಬರ ಸಮಸ್ಯೆಯ ಪರಿಹಾರಕ್ಕೆ ಜ್ಯೋತಿಷಿಗಳ ಹತ್ರ ಹೋದಾಗ ನನ್ನವ ಕುತೂಹಲದಿಂದಾ ಸಂತಾನ ಅಪೇಕ್ಷೆ ವ್ಯಕ್ತಪಡಿಸಿದ. ಯಾಕೆ ಆಗೋಲ್ಲ ಎಂದು ಸಂತಾನ 'ಗೋಪಾಲ ಕೃಷ್ಣ ವ್ರತ ' ಎರಡು ದಿನಗಳು ಪಾರಾಯಣ ಮಾಡಿಸಿದರು. ಮಗನೂ ಮಡಿಲು ಸೇರಿದ, ಬರೋಬ್ಬರಿ ಹತ್ತು ವರುಷಗಳ ನಂತರ. ಈಗ ದಿನ ದಿನವೂ, ಅವನ ಜೊತೆ ಇರೋಕೆ ನನಗೊಂದಿಷ್ಟು ಆರೋಗ್ಯ, ಆಯಸ್ಸು ಕೊಡು ತಂದೆ ಎಂದು ಬೇಡುವೆ.
೪.ಪಕ್ಕದ ಮನೆಯಾಕೆ ಅವರ ತಂಗಿಯ ಮುದ್ದಾದ ಹೆಣ್ಣು ಮಗುವನ್ನು ಆಗಾಗ್ಗೆ ಕರೆದುಕೊಂಡು ಬರ್ತಿದ್ರು. ನನಗಂತೂ ಮಕ್ಕಳು ಅಂದ್ರೆ ಬಲು ಪ್ರೀತಿ. ನೀವೊಂದು ಮನೆ ಮಾಡಿ ನಿಮ್ ತಂಗಿಯನ್ನು ಇಲ್ಲೇ ಇರಿಸಿಕೊಂಡರೆ, ಈ ಪಾಪುವನ್ನು ದಿನವೂ ಮುದ್ದಿಸಬಹುದು, ನನ್ ಮಗನ ಜೊತೆ ಆಡೋದು ನೋಡೋಕೆ ಚೆಂದ ಇರುತ್ತೆ ಅಂತಿದ್ದೆ. ದೇವರಾಣೆ ನನಗೆ ಆಗ ಗೊತ್ತೇ ಇರಲಿಲ್ಲ. ನಾವೇ ನಮ್ ಮನೆಯ ಮೇಲೆ ಮನೆ ಕಟ್ಟಿದೆವು, ಅದಕ್ಕೆ ಬಾಡಿಗೆಗೆಂದು ಅದೇ ಪಾಪುವಿನ ಆಗಮನ ಆಯ್ತು. ಈಗ ನನ್ ಮಗನ ಜೊತೆಗೆ ನಿತ್ಯವೂ ಆಡ್ತಾಳೆ. ಪರವಾಗಿಲ್ಲ, ಅಷ್ಟೇನೂ ತಡವಾಗಿಲ್ಲ, ಹಾಗೆ ನಾ ಬಯಸಿ ಬರೀ ೬ ವರ್ಷಗಳ ನಂತರ ಆಸೆ ನೆರವೇರಿತು:-)
ಮಗನ ಶಾಲೆಯ ಎದುರೇ ಮನೆ ಮಾಡುವ ಸುಂದರ ಕನಸಿದೆ. ಅದು ಯಾವಾಗ ನೆರೆವೇರುತ್ತೋ
!!! ಈಗವನು ಎರಡನೆ ಕ್ಲಾಸು:-)
ಹೀಗೇ .....ಒಂದೊಂದನ್ನೂ ನಾ ಹೇಳ್ತಾ ಹೋದರೆ ......
ನಗು ಬರುತ್ತೆ, ನಾನು ಅದೃಷ್ಟವಂತಳಾ !!!!!
ನೆನ್ನೆ ಮುಡಿದ ಮಲ್ಲಿಗೆ ಇಂದು ಬಾಡಿದೆ.
ಎಂದೋ ಹೋದೆ ನೀನು, ಆದರೇ ...... ನಿನ್ನ ನೆನಪು ಇಂದೂ ಕಾಡಿದೆ.

ಇಂದು ಬೆಳಗ್ಗೆ ತಿಂಡಿ ಏನು ಮಾಡಿದ್ರೀ ? ಎಂದು ಪಕ್ಕದ್ಮನೆ ಅಜ್ಜಿ ಕೇಳಿದ್ರು. ಆಗ ಇನ್ನೂ ಹನ್ನೆರಡು ಗಂಟೆ. ಸ್ವಲ್ಪ ಹೊತ್ತು ನೆನಪಿಸಿಕೊಂಡು 'ಅವರೆಕಾಳು-ತರಕಾರಿ ಹಾಕಿದ ಉಪ್ಪಿಟ್ಟು' ಎಂದೆ. ಸಖತ್ ಖುಷಿ ಆಯ್ತು ನನಗೆ  
ಒನ್ಸ್ ಅಪಾನ್ ಏ ಟೈಂ ------
ಸುಜಾತಾ ಅಂದ್ರೆ ಮಾತು ಮಾತು ಮಾತು, ತರಲೆ. ನಾನಿದ್ದಲ್ಲಿ ನಗು ....ಫ್ರೆಂಡ್ಸ್ ಸಿಕ್ಕಾಪಟ್ಟೆ. ಅವರ ಬರ್ತ್ಡೇ, ಮಕ್ಕಳ ಜನುಮದಿನ, ವೆಡಿಂಗ್ ಆನಿವರ್ಸರಿ .....ಏನೆಲ್ಲಾ ನೆನಪಿರ್ತಿತ್ತು! ಅದಿರಲಿ ಈ ಸಲ ಪಾರ್ಟಿ ಅಟೆಂಡ್ ಮಾಡುವಾಗ, ಲಾಸ್ಟ್ ಯಾವ ಹೋಟೆಲ್ ನಲ್ಲಿ ಮಾಡಿದ್ವಿ, ಏನು ಮೆನು, ಕೊನೆಗೆ ನಾನು ಯಾವ ಡ್ರೆಸ್ ಹಾಕಿದ್ದೆ ಆಗ, ಯಾರು ಎಷ್ಟು ಕುಡಿದರು , ಏನ್ ತಿಂದರು, ಏನೆಲ್ಲಾ ಜೋಕ್ಸ್ ಇತ್ತು ....... ಸಣ್ಣ ಸಣ್ಣ ಬೇಕಾದ, ಬೇಡದ ವಿಷಯಗಳೆಲ್ಲಾ ನೆನಪಿರ್ತಿತ್ತು. ಆಗ ಅದೇ ಖುಷಿ 
ಒಂದಿನ ಫ್ರೆಂಡ್ಸ್ ಜೊತೆ ನನ್ ಜನುಮದಿನ 'ನಂದಿನಿ' ಯಲ್ಲಿ ಆಚರಿಸಿಕೊಂಡು ಬಂದು ಮಲಗಿದೆ, ಎದ್ದದ್ದು ಒಂದೂವರೆ ತಿಂಗಳ ನಂತರ. ಹೌದು ಜ್ವರ ತೀವ್ರವಾಗಿ ಕೋಮಾದಲ್ಲಿ ಮಲಗಿ ನಿತ್ರಾಣ. ಎದ್ದ ಮೇಲೆ ನನಗೆ ನಾನೇ ಯಾರಂತಾ ಮರೆತು ಹೋಗಿತ್ತು. ಪ್ರೀತಿಸಿ ಮದುವೆಯಾದ ನನ್ನವನಿಗೆ -ನೀ ಯಾರು ? ಎಂದು ಕೇಳಿದರೆ ಅವನ್ ಕಥೆ ಹೇಗಿರಬೇಡ ? ನನ್ನ ಮನೆ ಎಲ್ಲಿ, ನನ್ನ ಊರು ಯಾವುದು , ನಾನು ಯಾರು ಎಂದು ಬಂದವರೆಲ್ಲಾ ಪ್ರಶ್ನಿಸ್ತಿದ್ರು. ನಿಜವಾಗಲೂ ಎಲ್ಲವನ್ನೂ ಮರೆತಿದ್ದೆ. ದಿನ ಕಳೀತಾ ಕಳೀತಾ .....ಒಂದೊಂದೇ ನೆನಪಿಸಿಕೊಳ್ಳಲು ಶುರು ಮಾಡಿದೆ. ಒಂದು ನಿದ್ರೆಯಿಂದಾ ಎದ್ದ ತಕ್ಷಣ ---ನಾನು ಯಾರು, ಎಲ್ಲಿದ್ದೇನೆ ಎಂದು ಪ್ರತೀ ಸಲ ನೆನಪು ಮಾಡಿಕೊಳ್ಳುವ ಸಾಹಸ. ಮನೆಯಿಂದಾ ಆಚೆ ಹೋದಾಗ ನನಗೆ ಮನೆ ಎಲ್ಲಿ ಅಂತಾ ಮರೆತುಹೋದರೆ ಅನಿಸಿ ಹೊರಗೆ ಹೋಗ್ತಾನೆ ಇರಲಿಲ್ಲ .ಮಾತಿನ ಮಲ್ಲಿಗೆ ಕೃತಕ ಉಸಿರಾಟದ ಸಲುವಾಗಿ ಉಪಕರಣ ಜೋಡಿಸಲು ಕತ್ತು ಕೊಯ್ದಿದ್ರು, ಹೀಗೇ .....ಮಾತಿರದೆ ಮೂಕಳಾಗಿ ಕೆಲವು ದಿನ ಕಳೆದೆ. ಆಮೇಲೂ ನಿಧಾನಕ್ಕೆ ಮಕ್ಕಳಂತೆ ಮಾತು:( ಅರವತ್ತು ನಾಲ್ಕು ಕೆ.ಜಿ ಯ ಗುಂಡಗಿನ ಸುಜಾತಾ ಆಸ್ಪತ್ರೆಯಿಂದಾ ಬರುವಾಗ ೨೪ ಕೆ.ಜಿ. ಉದ್ದನೆಯ ಓಲಾಡುವ ಜಡೆ ಮಾಯ. ಬೆಳ್ಳಗಿನ ಮೈ ಪೂರಾ ಕಪ್ಪು. ( ನೀನು ಚೆಂದ ಇದ್ದೀಯಾ ಎಂದು ನನಗೆ ಈಗ ಯಾರಾದರೂ ಅಂದರೆ ನಗು ಬರುತ್ತೆ. ಇದು ಶಾಶ್ವತ ಅಲ್ಲ ಅನ್ನೋದು ನನಗೆ ಚೆನ್ನಾಗಿ ಗೊತ್ತು ಅಂತಾ ) ನಗು ನಗುತ್ತಾ ಓಡಾಡುವ ನಾನು ಅಸಾಹಾಯಕಳಾಗಿ ಮಲಗಿದ್ದಲ್ಲೇ ಮಲಗಿ ಎಲ್ಲಾದಕ್ಕೂ ಬೇರೆಯವರನ್ನು ಆಶ್ರಯಿಸುವ ಸ್ಥಿತಿ.
ನನ್ನವರು ನನಗೆ, ಆಸ್ಪತ್ರೆಯಲ್ಲಿದ್ದಾಗಿನ ನನ್ನ ಅವತಾರಗಳು, ನಾನು ಬಡ ಬಡಿಸಿದ ಮಾತುಗಳು ......ಹೀಗೇ ಕೆಲವನ್ನು ಹೇಳ್ತಾ ಹೋದರೆ ಅದೆಲ್ಲಾ ಸಧ್ಯ ನೆನಪಲ್ಲಿ ಇರಲಿಲ್ಲ. ಇದು ಒಳ್ಳೆಯದು:-)
ಆಸ್ಪತ್ರೆಯಲ್ಲಿ ಅನುಭವಿಸಿದ ನೋವುಗಳನ್ನೆಲ್ಲಾ ಜೊತೆಗಿದ್ದವರ ಬಾಯಲ್ಲಿ ಕೇಳಿದಾಗ , ನಾನು ಇಷ್ಟನೆಲ್ಲಾ ಅನುಭವಿಸಿದೆನಾ ಅನಿಸುತ್ತೆ. ನನಗೇನೋ ದೇವರು ಮರೆಯುವುದನ್ನು ಕೊಟ್ಟು ಒಳ್ಳೆಯದೇ ಮಾಡಿದ ಅನಿಸಿತು.
ಆದರೆ ....... ಬಹಳಷ್ಟನ್ನು ಮರೆತು ನಾನು ಪೂರಾ ಹೊಸಬಳಾಗಿದ್ದೆ. ಮಕ್ಕಳು ನಡೆಯುವುದನ್ನು ಕಲಿತಂತೆ ನಾನು ನಡೆಯುವುದ ಕಲಿತೆ, ಮಾತು ಆಡೋದು ಕಲಿತೆ. ಹಳೆಯದನ್ನು ಹುಡುಕತೊಡಗಿದೆ, ಆಗ ಈ ಫೇಸ್ ಬುಕ್ ನಲ್ಲಿ ನನ್ನ ಬಾಲ್ಯದ ಸ್ನೇಹ ಸಿಕ್ಕೀತು ಎಂದು ಹುಡುಕಿದೆ. ಕೆಲವರು ಸಿಕ್ಕರು. ಮೊದಲಿನ ಪ್ರೀತಿ- ಸ್ನೇಹ ಬದಲಾಗಿತ್ತು ಅಷ್ಟೇ. ಏನೋ ಬರೆಯತೊಡಗಿದೆ, ಹೊಸ ಹೊಸ ಫ್ರೆಂಡ್ಸ್ ಸಿಕ್ಕರೂ:-) ನಾ ಬದಲಾದೆ.
ಇದು ನನ್ನ ಕಿರು ಪರಿಚಯ.
ಸವಿ ನೆನಪುಗಳು ಬೇಕು, ಕಹಿನೆನಪುಗಳು !!!!!
ಅಲ್ಲವನ್ನೂ ಸಮಚಿತ್ತದಿಂದಾ ಸ್ವೀಕರಿಸುವ ಮನೋಭಾವ ಈಗ 
ಮರೆತಿರೋದಕ್ಕೆ ಬೇಸರವಿಲ್ಲ. ನೆನ್ನೆ ನೆನ್ನೆಗೆ -ಇಂದಿನದು ಇಂದಿಗೆ -ನಾಳೆ ನಾಳೆಗೆ.